ಗರುಡ ಸದಾಶಿವರಾಯರು:

ಗರುಡ ಸದಾಶಿವರಾಯರು ಕ್ರಿ.ಶ.೧೮೮೦ರ ಸುಮಾರಿಗೆ ಜನಿಸಿದ್ದರು. ಇವರ ತಂದೆ ಗುರುನಾಥ ಶಾಸ್ತ್ರಿ. ಗರುಡ ಸದಾಶಿವರಾಯರು ‘ಗದಗ ಶ್ರೀ ದತ್ತಾತ್ರೇಯ ನಾಟಕ ಮಂಡಳಿ’ ಯನ್ನು ಕಟ್ಟಿ, ಕರ್ನಾಟಕದ ಉದ್ದಗಲಕ್ಕೂ ಸಹಸ್ರಾರು ಪ್ರದರ್ಶನಗಳನ್ನು ನೀಡಿದರು.

ಲೋಕಮಾನ್ಯ ತಿಲಕರ ರಾಷ್ಟ್ರೀಯ ಹೋರಾಟಕ್ಕೆ ಸಂಬಂಧಿಸಿದ ‘ಬಂಧವಿಮೋಚನೆ’ ನಾಟಕದಿಂದ ರಂಗಪ್ರವೇಶ ಮಾಡಿದ ಗರುಡರು ೫೦ಕ್ಕೂ ಹೆಚ್ಚು ವರ್ಷಗಳನ್ನು ರಂಗಭೂಮಿಯ ಮೇಲೆ ಕಳೆದಿದ್ದಾರೆ. ಸುಮಾರು ೫೦ ಪೌರಾಣಿಕ,ಸಾಮಾಜಿಕ,ಐತಿಹಾಸಿಕ ಹಾಗು ರಾಷ್ಟ್ರೀಯ ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಇವರ ‘ಪಾದುಕಾ ಪಟ್ಟಾಭಿಷೇಕ’ ರಂಗಭೂಮಿಯ ಇತಿಹಾಸದಲ್ಲಿಯೆ ಮಹತ್ವದ ನಾಟಕ.

"ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ", "ನಾಟ್ಯಾಚಾರ್ಯ" ಹೀಗೆ ಹತ್ತು ಹಲವು ಬಿರುದಾವಳಿಗಳನ್ನು ಪಡೆದ ಶ್ರೀ ಸದಾಶಿವರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು "ಗರೂಡ ಸದಾಶಿವರಾಯರು" ಎಂದೇ ಕರೆಯುತ್ತಿದ್ದರು. ರಂಗಭೂಮಿಯು ಉಚ್ರಾಯ ಸ್ಥಿತಿಯಲ್ಲಿದ್ದ 1905ರಿಂದ 1940ರ ಅವಧಿಯಲ್ಲಿ ಬಂದ ವೃತ್ತಿನಿರತ ರಂಗಕರ್ಮಿಗಳು ಹಾಗೂ ನಾಟಕಕಾರರಲ್ಲಿ ಶ್ರೀ ಸದಾಶಿವರಾವ್ ಗರುಡ ಅವರದ್ದು ದೊಡ್ಡ ಹೆಸರು. ವೃತ್ತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದುಕೊಟ್ಟ ಕೀರ್ತಿಯೂ ಶ್ರೀ ಸದಾಶಿವರಾವ್ ಗರುಡ ಅವರದ್ದು. ಈಗಲೂ ಅನೇಕ ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವರಾವ್ ಗರುಡ ಅವರ "ರಂಗಭೂಮಿ ಶಿಸ್ತು" ಪಾಲಿಸಿಕೊಂಡು ಹೋಗುತ್ತಿದ್ದಾರೆ.

"ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಕಟ್ಟಿ ಬೆಳೆಸಿ, ಅದಕ್ಕಾಗಿ ನಾಟಕಗಳನ್ನು ಕೂಡ ಬರೆದು ಪ್ರದರ್ಶಿಸಿದ ಕೀರ್ತಿ ಶ್ರೀ ಸದಾಶಿವರಾವ್ ಗರುಡ ಅವರದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕೂಡ ಶ್ರೀ ಸದಾಶಿವರಾವ್ ಗರುಡ ಅವರ "ಸತ್ಯ ಸಂಕಲ್ಪ" ನಾಟಕವನ್ನು ನೋಡಿ ಮೆಚ್ಚಿಕೊಂಡಿದ್ದು ವಿಶೇಷ. ಶ್ರೀ ಸದಾಶಿವರಾವ್ ಗರುಡ ಅವರ "ಕಂಸವಧ", "ಕೃಷ್ಣಲೀಲಾ", ಲಂಕಾದಹನ" ಮುಂತಾದ ನಾಟಕಗಳು ಬ್ರಿಟಿಷ್ ಆಡಳಿತದ ವಿರುದ್ಧ ಪರೋಕ್ಷವಾಗಿ ಧ್ವನಿ ಎತ್ತಿದ್ದು ಗಮನ ಸೆಳೆದ ಅಂಶ. ಈ ನಾಟಕಗಳನ್ನು ಆಗ ನೋಡಿದ ಪ್ರೇಕ್ಷಕರು ಉತ್ಸಾಹದಿಂದ "ಜೈ ಭಾರತ ಮಾತಾ", "ಬ್ರಿಟಿಷರಿಗೆ ಧಿಕ್ಕಾರ"ಎಂದು ಘೋಷಣೆ ಕೂಗುತ್ತಿದ್ದರು ಎನ್ನುವುದನ್ನೂ ಸ್ಮರಿಸಬಹುದು.

ನಾಟಕ ಸಾಹಿತ್ಯಕ್ಕೆ ಶ್ರೀ ಸದಾಶಿವರಾವ್ ಗರುಡ ಅವರು ನೀಡಿದ ಕೊಡುಗೆಯೂ ಅಪಾರ. 50ಕ್ಕೂ ಹೆಚ್ಚು ನಾಟಕಗಳನ್ನು ಬರೆದು ರಂಗದ ಮೇಲೆ ಪ್ರದರ್ಶಿಸಿದ್ದರು. "ಶ್ರೀರಾಮ ಪಾದುಕಾ ಪಟ್ಟಾಭಿಷೇಕ", "ವಿಷಮ ವಿವಾಹ", "ಲಂಕಾ ದಹನ", "ಕಂಸವಧ", "ಚವತಿ ಚಂದ್ರ", ಮಾಯಾ ಬಜಾರ", "ಸತ್ಯ ಸಂಕಲ್ಪ", "ನಮ್ಮ ಭಾಗ್ಯೋದಯ", "ದುರಾತ್ಮ ರಾವಣ", "ಉಗ್ರ ಕಲ್ಯಾಣ", "ಶಕ್ತಿ ವಿಲಾಸ"...ಮುಂತಾದ ನಾಟಕಗಳು ಈಗಲೂ ಜನಮನದಲ್ಲಿ ಉಳಿದಿವೆ.

ಗರುಡರ ಕೆಲವು ಪ್ರಸಿದ್ಧ ನಾಟಕಗಳು: ಪಾದುಕಾ ಪಟ್ಟಾಭಿಷೇಕ, ಸತ್ಯಸಂಕಲ್ಪ, ಎಚ್ಚಮನಾಯಕ, ಮಾರ್ಕಂಡೇಯ, ಕೀಚಕವಧೆ, ಬಲಸಿಂಹ ತಾರಾ, ಶಕ್ತಿವಿಲಾಸ, ಶಶಿಕಲಾ, ಉಗ್ರಕಲ್ಯಾಣ, ವಿಷಮ ವಿವಾಹ, ಕಂಸವಧೆ, ನಾನು ಕನ್ನಡಿಗ, ಶ್ರೀ ಶರಣ ಬಸವೇಶ್ವರ, ತುಕಾರಾಮ.

೧೯೫೪ರಲ್ಲಿ ಗರುಡ ಸದಾಶಿವರಾಯರು ನಿಧನರಾದರು.