ಪದಾಧಿಕಾರಿಗಳು
* * * * * * * * * * * *

ಪ್ರಧಾನ ಪೋಷಕರು

ಶ್ರೀ. ಬಿ.ಬಿ. ರಾಮಸ್ವಾಮಿ ಗೌಡ

ಗೌರವಾಧ್ಯಕ್ಷರು
ಶ್ರೀಮತಿ. ಪ್ರೇಮಾ ಡೇವಿಡ್

ಅಧ್ಯಕ್ಷರು
ಶ್ರೀ. ಡಿ.ಗರುಡ (ಯೋಗೇಶ್)

ಉಪಾಧ್ಯಕ್ಷರು
1. ಶ್ರೀ. ಗುರುರಾಜ್ ಎಂ.ಎಲ್.
2. ಶ್ರೀಮತಿ. ಸುಧಾ ಗುರುರಾಜ್
3. ಶ್ರೀ. ಎಂ.ಎನ್. ಗುಜರ್
4. ಶ್ರೀ. ಪ್ರಶಾಂತ ಚಿತ್ತರಗಿ
5. ಶ್ರೀಮತಿ. ಸಾಧನಾ ಪ್ರಶಾಂತ್

6. ಶ್ರೀಮತಿ. ಸಂಗೀತಾ ಮಂಜಪ್ಪ

ಪ್ರಧಾನ ಕಾರ್ಯದರ್ಶಿ
ಕುಮಾರಿ. ಶೋಭಾ ಎಂ.ಲೋಲನಾಥ್

ಜಂಟಿ ಕಾರ್ಯದರ್ಶಿಗಳು
1. ಕುಮಾರ್. ಆರ್. ನವೀನ್ ಕುಮಾರ್
2. ಕುಮಾರಿ. ಲತಾ ಎಸ್. ರಾವ್

ಸಂಘಟನಾ ಕಾರ್ಯದರ್ಶಿ
ಕುಮಾರಿ. ಯೋಗೇಶ್ವರಿ ಎಲ್.ಎಂ.

ಖಜಾಂಚಿ
ಕುಮಾರಿ. ತಾರಾಕುಮಾರಿ ಎಂ.ಎಲ್.

ಕಾರ್ಯಕಾರಿ ಸಮಿತಿ ಸದಸ್ಯರು
1. ಶ್ರೀ. ಎಲ್.ಎಸ್. ಸತ್ಯನಾರಾಯಣರಾವ್
2. ಶ್ರೀಮತಿ. ಶಾಂಭವಿ ಲೋಲನಾಥ್
3. ಶ್ರೀಮತಿ. ಅಶ್ವಿನಿ ಪ್ರಶಾಂತ್
4. ಶ್ರೀಮತಿ. ಎನ್.ನಾಗರಾಜ್
5. ಕುಮಾರಿ. ದಿವ್ಯಾ ರಘುರಾಮ್
6. ಶ್ರೀ. ರಘುನಂದನ್ .ಎಸ್
7. ಶ್ರೀ. ಎನ್. ಪ್ರಶಾಂತ್
8. ಶ್ರೀ. ಸುದರ್ಶನ್ ಬಾಬು

ಗರುಡ ನಾಟ್ಯ ಸಂಘ (ರಿ):

ಗರುಡ ನಾಟ್ಯ ಸಂಘ (ರಿ) ಇದು "ನಾಟಕಾಲಂಕಾರ" ಬಿರುದಾಂಕಿತ ಶ್ರೀ ಗರುಡ ಸದಾಶಿವರಾಯರ ಕುಟುಂಬದ ಮೂರನೇ ತಲೆಮಾರಿನವರು ಸ್ಥಾಪಿಸಿರುವ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ. ಈ ಗರುಡ ನಾಟ್ಯ ಸಂಘವು ಮೊದಲು ಚಟುವಟಿಕೆ ಆರಂಭಿಸಿದ್ದು ಗದಗ ಜಿಲ್ಲೆಯಲ್ಲಿ. ಅದೇ ಗರುಡ ಸದಾಶಿವರಾಯರು ವಾಸವಾಗಿದ್ದ ಊರು. ಅಲ್ಲಿಯೇ ಗರುಡ ಸದಾಶಿವರಾಯರ ನೆನಪಿನಲ್ಲಿ ಆರಂಭಗೊಂಡ ಸಂಘವು ಈಗ ಬೆಂಗಳೂರಿನಲ್ಲಿ ಹೊಸದೊಂದು ಹುರುಪಿನೊಂದಿಗೆ ಬೆಳೆಯುತ್ತಿದೆ.

ರಂಗಭೂಮಿಯಲ್ಲಿ ಖ್ಯಾತಿ ಪಡೆದ ಶ್ರೀ ಗರುಡ ಸದಾಶಿವರಾಯರ ನೆನಪನ್ನು ಹಸಿರಾಗಿ ಉಳಿಸುವ ಉದ್ದೇಶದೊಂದಿಗೆ ಈ ಸಂಘವನ್ನು ಸ್ಥಾಪಿಸಿದ್ದು ಅವರ ಮಕ್ಕಳಾದ ದತ್ತಾತ್ರೇಯ, ಶ್ರೀಪಾದರಾವ್, ವಲ್ಲಭರಾವ್ ಹಾಗೂ ನರಹರಿರಾವ್ ಅವರು. ಆದರೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ನಿರಂತರವಾಗಿ ಚಟುವಟಿಕೆಯಲ್ಲಿ ಉಳಿಸಿಕೊಂಡು ಬಂದ ಶ್ರೇಯ ಸಲ್ಲುವುದು ಮಾತ್ರ ಶ್ರೀಪಾದರಾವ್ ಗರುಡ ಅವರಿಗೆ.

ಶ್ರೀಪಾದರಾವ್ ಅವರ ಕಿರಿಯ ಪುತ್ರ ಪ್ರಕಾಶ ಗರುಡ ಹಾಗೂ ಸೊಸೆ ಶ್ರೀಮತಿ ರಜನಿ ಗರುಡ ಅವರು ಕೂಡ ಗರುಡ ನಾಟ್ಯ ಸಂಘದ ಮೂಲಕವಾಗಿ ಅನೇಕ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ ವಲ್ಲಭರಾವ್ ಅವರ ಕಿರಿಯ ಪುತ್ರ ಯೋಗೇಶ್ ಗರುಡ ಅವರು ಕೂಡ ಈ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಲೊಳ್ಳುತ್ತಾ ಬಂದವರು. ಗರುಡ ಕುಟುಂಬದ ಈ ಮೂರನೇ ತಲೆಮಾರಿನವರಿಗೆ ಕಲೆಯಲ್ಲಿನ ಆಸಕ್ತಿ ರಕ್ತಗತವಾಗಿ ಬಂದಿದೆ.

ಗರುಡ ಸದಾಶಿವರಾಯರ ಕುಟುಂಬದ ಕುರಿತು ಹೇಳುವುದಾದರೆ ಇದೊಂದು ದೊಡ್ಡ ಕಲಾ ಇತಿಹಾಸವುಳ್ಳ ಕುಟುಂಬ. ಸಂಗೀತ, ನೃತ್ಯ ಹಾಗೂ ನಾಟಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ. ಗರುಡ ಸದಾಶಿವರಾಯರು ಕರ್ನಾಟಕದಲ್ಲಿ ಸಂಗೀತ ನಾಟಕಕ್ಕೆ ಹೊಸದೊಂದು ಶಿಸ್ತು ಹಾಗೂ ಬದ್ಧತೆಯನ್ನು ನೀಡಿದವರು. "ಶ್ರೀ ದತ್ತಾತ್ರೇಯ ನಾಟಕ ಮಂಡಳಿ"ಯನ್ನು ಕಟ್ಟಿ ನೂರಾರು ಕಲಾವಿದರಿಗೆ ಸದಾಶಿವರಾಯರು ಆಶ್ರಯದಾತರೆನಿಸಿದವರು. 1910ರಿಂದ 1942ರ ಅವಧಿಯಲ್ಲಿ ತಾವೇ ರಚಿಸಿದ ಅರವತ್ತಕ್ಕೂ ಹೆಚ್ಚು ನಾಟಕಗಳ ಸಾವಿರಾರು ಪ್ರದರ್ಶನವನ್ನು ಸದಾಶಿವರಾಯರು ನೀಡಿದ್ದರು. ಅಷ್ಟೇ ಅಲ್ಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೂಡ ತಮ್ಮ ನಾಟಕಗಳ ಮೂಲಕ ಮಹತ್ವದ ಕೊಡುಗೆಯನ್ನು ನೀಡಿದವರು ಸದಾಶಿವರಾಯರು. ಅವರ ಮಕ್ಕಳಾದ ದತ್ತಾತ್ರೇಯ, ಶ್ರೀಪಾದರಾವ್, ವಲ್ಲಭರಾವ್ ಹಾಗೂ ನರಹರಿರಾವ್ ಅವರೂ ತಮ್ಮದೇ ಆದ ರೀತಿಯಲ್ಲಿ ಕಲಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರು.

ಗರುಡ ಕುಟುಂಬದ ಕಲಾ ಪರಂಪರೆಯು ನಿರಂತರವಾಗಿ ಹರಿಯುವ ನೀರಾಗಿದೆ. ಸದಾಶಿವರಾಯರ ಮೊಮ್ಮಕ್ಕಳಾದ ಪ್ರಕಾಶ, ಯೋಗೇಶ, ವೇದಾ, ಗೀತಾ, ಲಲಿತಾ, ಅಪರ್ಣಾ, ಗುರುಚರಣ ಹಾಗೂ ವಸುಧಾ ಅವರೂ ಸಂಗೀತ, ನಾಟಕ ಹಾಗೂ ನೃತ್ಯ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಸದಾಶಿವರಾಯರ ಮರಿಮಕ್ಕಳಾದ ನಿವೇದಿತಾ, ಉಲುಪಿ, ಮಿಥಾ, ಪರಿಮಳಾ ಹಾಗೂ ದೀಪಾಲಿ ಕೂಡ ಕಲಾಸಕ್ತರು.

ಗರುಡರ ಕುಟುಂಬಕ್ಕೆ ಸೊಸೆಯರಾಗಿ ಬಂದ ರಜನಿ ಹಾಗೂ ಶೋಭಾ ಅವರೂ ನೃತ್ಯ, ಸಂಗೀತ ಹಾಗೂ ಅಭಿನಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಗರುಡ ಸದಾಶಿವರಾಯರ ಕುಟುಂಬದ ಕುಡಿಗಳು ಈಗ ಬೇರುಬಿಟ್ಟು ಕಲಾ ಹೆಮ್ಮರವಾಗಿಯೂ ಬೆಳೆದಿದ್ದಾರೆ. ಅಷ್ಟೇ ಅಲ್ಲ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿರುವ ಗರುಡರ ಮೊಮ್ಮಕ್ಕಳಲ್ಲಿ ಒಬ್ಬರಾದ ಅಪರ್ಣಾ ಅವರು ಅಲ್ಲಿಯೇ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. ಪ್ರಕಾಶ ಗರುಡ ಅವರು ಧಾರವಾಡದಲ್ಲಿ "ಗೊಂಬೆಮನೆ" ಎನ್ನುವ ಸಂಸ್ಥೆಯನ್ನು ಕಟ್ಟಿ ಕಲೆಯ ಇನ್ನೊಂದು ಕ್ಷೇತ್ರದಲ್ಲಿ ವಿಶಿಷ್ಟವಾದ ಸೇವೆ ಸಲ್ಲಿಸುತ್ತಿದ್ದಾರೆ.

ಹೀಗೆ ವಿವಿಧ ಕಡೆಗೆ ಬೇರು ಬಿಟ್ಟುಕೊಂಡು ಹರಡಿರುವ ಹೆಮ್ಮರದ ಒಂದು ಬೇರು ಉದ್ಯಾನನಗರಿಯಾದ ಬೆಂಗಳೂರಿನಲ್ಲಿ ವಿಕಾಸವಾಗುತ್ತಿದೆ. ಅದಕ್ಕೆ ಗರುಡ ನಾಟ್ಯ ಸಂಘ ಎನ್ನುವ ಕಲಾ ಸಂಘಟನೆಯ ಛತ್ರಛಾಯೆಯೂ ಸಿಕ್ಕಿದೆ. ಈ ಕಲಾ ಸಂಘಕ್ಕೆ ಹೊಸದೊಂದು ಆಯಾಮ ನೀಡಿದವರು ಶೋಭಾ. ಟೆಲಿವಿಷನ್ ಕ್ಷೇತ್ರದಲ್ಲಿ ನಟಿಯಾಗಿ ಜನಪ್ರಿಯತೆ ಗಳಿಸಿರುವ ಶೋಭಾ ಅವರು ತಮ್ಮ ಹವ್ಯಾಸವಾದ ನೃತ್ಯ ಕಲೆಯನ್ನು ಗರುಡ ನಾಟ್ಯ ಸಂಘದ ಮೂಲಕ ನೀರೆರೆದು ಬೆಳೆಸುತ್ತಿದ್ದಾರೆ.

ಕಳೆದ ಆರು ವರ್ಷಗಳಿಂದ ಗರುಡ ನಾಟ್ಯ ಸಂಘವು ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶದ ಅನೇಕ ನಗರಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದೆ. ನೃತ್ಯಕ್ಕೆ ಮಾತ್ರ ಸೀಮಿತವಾಗಿ ಉಳಿಯದೆ ಸಾಹಿತ್ಯ, ಛಾಯಾಚಿತ್ರಕಲೆ, ಪೇಂಟಿಂಗ್, ಸಂಗೀತ, ನಾಟಕ ಹಾಗೂ ಭಾಷಣ ಕಲೆಯ ಮೂಲಕ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂಥ ಕಾರ್ಯಕ್ರಮಗಳನ್ನು ಹಾಗೂ ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದೆ

ಗರುಡ ಸದಾಶಿವರಾಯರು:

ಗರುಡ ಸದಾಶಿವರಾಯರು ಕ್ರಿ.ಶ.೧೮೮೦ರ ಸುಮಾರಿಗೆ ಜನಿಸಿದ್ದರು. ಇವರ ತಂದೆ ಗುರುನಾಥ ಶಾಸ್ತ್ರಿ. ಗರುಡ ಸದಾಶಿವರಾಯರು ‘ಗದಗ ಶ್ರೀ ದತ್ತಾತ್ರೇಯ ನಾಟಕ ಮಂಡಳಿ’ ಯನ್ನು ಕಟ್ಟಿ, ಕರ್ನಾಟಕದ ಉದ್ದಗಲಕ್ಕೂ ಸಹಸ್ರಾರು ಪ್ರದರ್ಶನಗಳನ್ನು ನೀಡಿದರು.

ಲೋಕಮಾನ್ಯ ತಿಲಕರ ರಾಷ್ಟ್ರೀಯ ಹೋರಾಟಕ್ಕೆ ಸಂಬಂಧಿಸಿದ ‘ಬಂಧವಿಮೋಚನೆ’ ನಾಟಕದಿಂದ ರಂಗಪ್ರವೇಶ ಮಾಡಿದ ಗರುಡರು ೫೦ಕ್ಕೂ ಹೆಚ್ಚು ವರ್ಷಗಳನ್ನು ರಂಗಭೂಮಿಯ ಮೇಲೆ ಕಳೆದಿದ್ದಾರೆ. ಸುಮಾರು ೫೦ ಪೌರಾಣಿಕ,ಸಾಮಾಜಿಕ,ಐತಿಹಾಸಿಕ ಹಾಗು ರಾಷ್ಟ್ರೀಯ ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಇವರ ‘ಪಾದುಕಾ ಪಟ್ಟಾಭಿಷೇಕ’ ರಂಗಭೂಮಿಯ ಇತಿಹಾಸದಲ್ಲಿಯೆ ಮಹತ್ವದ ನಾಟಕ.

"ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ", "ನಾಟ್ಯಾಚಾರ್ಯ" ಹೀಗೆ ಹತ್ತು ಹಲವು ಬಿರುದಾವಳಿಗಳನ್ನು ಪಡೆದ ಶ್ರೀ ಸದಾಶಿವರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು "ಗರೂಡ ಸದಾಶಿವರಾಯರು" ಎಂದೇ ಕರೆಯುತ್ತಿದ್ದರು. ರಂಗಭೂಮಿಯು ಉಚ್ರಾಯ ಸ್ಥಿತಿಯಲ್ಲಿದ್ದ 1905ರಿಂದ 1940ರ ಅವಧಿಯಲ್ಲಿ ಬಂದ ವೃತ್ತಿನಿರತ ರಂಗಕರ್ಮಿಗಳು ಹಾಗೂ ನಾಟಕಕಾರರಲ್ಲಿ ಶ್ರೀ ಸದಾಶಿವರಾವ್ ಗರುಡ ಅವರದ್ದು ದೊಡ್ಡ ಹೆಸರು. ವೃತ್ತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದುಕೊಟ್ಟ ಕೀರ್ತಿಯೂ ಶ್ರೀ ಸದಾಶಿವರಾವ್ ಗರುಡ ಅವರದ್ದು. ಈಗಲೂ ಅನೇಕ ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವರಾವ್ ಗರುಡ ಅವರ "ರಂಗಭೂಮಿ ಶಿಸ್ತು" ಪಾಲಿಸಿಕೊಂಡು ಹೋಗುತ್ತಿದ್ದಾರೆ.

"ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಕಟ್ಟಿ ಬೆಳೆಸಿ, ಅದಕ್ಕಾಗಿ ನಾಟಕಗಳನ್ನು ಕೂಡ ಬರೆದು ಪ್ರದರ್ಶಿಸಿದ ಕೀರ್ತಿ ಶ್ರೀ ಸದಾಶಿವರಾವ್ ಗರುಡ ಅವರದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕೂಡ ಶ್ರೀ ಸದಾಶಿವರಾವ್ ಗರುಡ ಅವರ "ಸತ್ಯ ಸಂಕಲ್ಪ" ನಾಟಕವನ್ನು ನೋಡಿ ಮೆಚ್ಚಿಕೊಂಡಿದ್ದು ವಿಶೇಷ. ಶ್ರೀ ಸದಾಶಿವರಾವ್ ಗರುಡ ಅವರ "ಕಂಸವಧ", "ಕೃಷ್ಣಲೀಲಾ", ಲಂಕಾದಹನ" ಮುಂತಾದ ನಾಟಕಗಳು ಬ್ರಿಟಿಷ್ ಆಡಳಿತದ ವಿರುದ್ಧ ಪರೋಕ್ಷವಾಗಿ ಧ್ವನಿ ಎತ್ತಿದ್ದು ಗಮನ ಸೆಳೆದ ಅಂಶ. ಈ ನಾಟಕಗಳನ್ನು ಆಗ ನೋಡಿದ ಪ್ರೇಕ್ಷಕರು ಉತ್ಸಾಹದಿಂದ "ಜೈ ಭಾರತ ಮಾತಾ", "ಬ್ರಿಟಿಷರಿಗೆ ಧಿಕ್ಕಾರ"ಎಂದು ಘೋಷಣೆ ಕೂಗುತ್ತಿದ್ದರು ಎನ್ನುವುದನ್ನೂ ಸ್ಮರಿಸಬಹುದು.

ನಾಟಕ ಸಾಹಿತ್ಯಕ್ಕೆ ಶ್ರೀ ಸದಾಶಿವರಾವ್ ಗರುಡ ಅವರು ನೀಡಿದ ಕೊಡುಗೆಯೂ ಅಪಾರ. 50ಕ್ಕೂ ಹೆಚ್ಚು ನಾಟಕಗಳನ್ನು ಬರೆದು ರಂಗದ ಮೇಲೆ ಪ್ರದರ್ಶಿಸಿದ್ದರು. "ಶ್ರೀರಾಮ ಪಾದುಕಾ ಪಟ್ಟಾಭಿಷೇಕ", "ವಿಷಮ ವಿವಾಹ", "ಲಂಕಾ ದಹನ", "ಕಂಸವಧ", "ಚವತಿ ಚಂದ್ರ", ಮಾಯಾ ಬಜಾರ", "ಸತ್ಯ ಸಂಕಲ್ಪ", "ನಮ್ಮ ಭಾಗ್ಯೋದಯ", "ದುರಾತ್ಮ ರಾವಣ", "ಉಗ್ರ ಕಲ್ಯಾಣ", "ಶಕ್ತಿ ವಿಲಾಸ"...ಮುಂತಾದ ನಾಟಕಗಳು ಈಗಲೂ ಜನಮನದಲ್ಲಿ ಉಳಿದಿವೆ.

ಗರುಡರ ಕೆಲವು ಪ್ರಸಿದ್ಧ ನಾಟಕಗಳು: ಪಾದುಕಾ ಪಟ್ಟಾಭಿಷೇಕ, ಸತ್ಯಸಂಕಲ್ಪ, ಎಚ್ಚಮನಾಯಕ, ಮಾರ್ಕಂಡೇಯ, ಕೀಚಕವಧೆ, ಬಲಸಿಂಹ ತಾರಾ, ಶಕ್ತಿವಿಲಾಸ, ಶಶಿಕಲಾ, ಉಗ್ರಕಲ್ಯಾಣ, ವಿಷಮ ವಿವಾಹ, ಕಂಸವಧೆ, ನಾನು ಕನ್ನಡಿಗ, ಶ್ರೀ ಶರಣ ಬಸವೇಶ್ವರ, ತುಕಾರಾಮ.

೧೯೫೪ರಲ್ಲಿ ಗರುಡ ಸದಾಶಿವರಾಯರು ನಿಧನರಾದರು.