ಗರುಡ ನಾಟ್ಯ ಸಂಘ (ರಿ):

ಗರುಡ ನಾಟ್ಯ ಸಂಘ (ರಿ) ಇದು "ನಾಟಕಾಲಂಕಾರ" ಬಿರುದಾಂಕಿತ ಶ್ರೀ ಗರುಡ ಸದಾಶಿವರಾಯರ ಕುಟುಂಬದ ಮೂರನೇ ತಲೆಮಾರಿನವರು ಸ್ಥಾಪಿಸಿರುವ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ. ಈ ಗರುಡ ನಾಟ್ಯ ಸಂಘವು ಮೊದಲು ಚಟುವಟಿಕೆ ಆರಂಭಿಸಿದ್ದು ಗದಗ ಜಿಲ್ಲೆಯಲ್ಲಿ. ಅದೇ ಗರುಡ ಸದಾಶಿವರಾಯರು ವಾಸವಾಗಿದ್ದ ಊರು. ಅಲ್ಲಿಯೇ ಗರುಡ ಸದಾಶಿವರಾಯರ ನೆನಪಿನಲ್ಲಿ ಆರಂಭಗೊಂಡ ಸಂಘವು ಈಗ ಬೆಂಗಳೂರಿನಲ್ಲಿ ಹೊಸದೊಂದು ಹುರುಪಿನೊಂದಿಗೆ ಬೆಳೆಯುತ್ತಿದೆ.

ರಂಗಭೂಮಿಯಲ್ಲಿ ಖ್ಯಾತಿ ಪಡೆದ ಶ್ರೀ ಗರುಡ ಸದಾಶಿವರಾಯರ ನೆನಪನ್ನು ಹಸಿರಾಗಿ ಉಳಿಸುವ ಉದ್ದೇಶದೊಂದಿಗೆ ಈ ಸಂಘವನ್ನು ಸ್ಥಾಪಿಸಿದ್ದು ಅವರ ಮಕ್ಕಳಾದ ದತ್ತಾತ್ರೇಯ, ಶ್ರೀಪಾದರಾವ್, ವಲ್ಲಭರಾವ್ ಹಾಗೂ ನರಹರಿರಾವ್ ಅವರು. ಆದರೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ನಿರಂತರವಾಗಿ ಚಟುವಟಿಕೆಯಲ್ಲಿ ಉಳಿಸಿಕೊಂಡು ಬಂದ ಶ್ರೇಯ ಸಲ್ಲುವುದು ಮಾತ್ರ ಶ್ರೀಪಾದರಾವ್ ಗರುಡ ಅವರಿಗೆ.

ಶ್ರೀಪಾದರಾವ್ ಅವರ ಕಿರಿಯ ಪುತ್ರ ಪ್ರಕಾಶ ಗರುಡ ಹಾಗೂ ಸೊಸೆ ಶ್ರೀಮತಿ ರಜನಿ ಗರುಡ ಅವರು ಕೂಡ ಗರುಡ ನಾಟ್ಯ ಸಂಘದ ಮೂಲಕವಾಗಿ ಅನೇಕ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ ವಲ್ಲಭರಾವ್ ಅವರ ಕಿರಿಯ ಪುತ್ರ ಯೋಗೇಶ್ ಗರುಡ ಅವರು ಕೂಡ ಈ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಲೊಳ್ಳುತ್ತಾ ಬಂದವರು. ಗರುಡ ಕುಟುಂಬದ ಈ ಮೂರನೇ ತಲೆಮಾರಿನವರಿಗೆ ಕಲೆಯಲ್ಲಿನ ಆಸಕ್ತಿ ರಕ್ತಗತವಾಗಿ ಬಂದಿದೆ.

ಗರುಡ ಸದಾಶಿವರಾಯರ ಕುಟುಂಬದ ಕುರಿತು ಹೇಳುವುದಾದರೆ ಇದೊಂದು ದೊಡ್ಡ ಕಲಾ ಇತಿಹಾಸವುಳ್ಳ ಕುಟುಂಬ. ಸಂಗೀತ, ನೃತ್ಯ ಹಾಗೂ ನಾಟಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ. ಗರುಡ ಸದಾಶಿವರಾಯರು ಕರ್ನಾಟಕದಲ್ಲಿ ಸಂಗೀತ ನಾಟಕಕ್ಕೆ ಹೊಸದೊಂದು ಶಿಸ್ತು ಹಾಗೂ ಬದ್ಧತೆಯನ್ನು ನೀಡಿದವರು. "ಶ್ರೀ ದತ್ತಾತ್ರೇಯ ನಾಟಕ ಮಂಡಳಿ"ಯನ್ನು ಕಟ್ಟಿ ನೂರಾರು ಕಲಾವಿದರಿಗೆ ಸದಾಶಿವರಾಯರು ಆಶ್ರಯದಾತರೆನಿಸಿದವರು. 1910ರಿಂದ 1942ರ ಅವಧಿಯಲ್ಲಿ ತಾವೇ ರಚಿಸಿದ ಅರವತ್ತಕ್ಕೂ ಹೆಚ್ಚು ನಾಟಕಗಳ ಸಾವಿರಾರು ಪ್ರದರ್ಶನವನ್ನು ಸದಾಶಿವರಾಯರು ನೀಡಿದ್ದರು. ಅಷ್ಟೇ ಅಲ್ಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೂಡ ತಮ್ಮ ನಾಟಕಗಳ ಮೂಲಕ ಮಹತ್ವದ ಕೊಡುಗೆಯನ್ನು ನೀಡಿದವರು ಸದಾಶಿವರಾಯರು. ಅವರ ಮಕ್ಕಳಾದ ದತ್ತಾತ್ರೇಯ, ಶ್ರೀಪಾದರಾವ್, ವಲ್ಲಭರಾವ್ ಹಾಗೂ ನರಹರಿರಾವ್ ಅವರೂ ತಮ್ಮದೇ ಆದ ರೀತಿಯಲ್ಲಿ ಕಲಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರು.

ಗರುಡ ಕುಟುಂಬದ ಕಲಾ ಪರಂಪರೆಯು ನಿರಂತರವಾಗಿ ಹರಿಯುವ ನೀರಾಗಿದೆ. ಸದಾಶಿವರಾಯರ ಮೊಮ್ಮಕ್ಕಳಾದ ಪ್ರಕಾಶ, ಯೋಗೇಶ, ವೇದಾ, ಗೀತಾ, ಲಲಿತಾ, ಅಪರ್ಣಾ, ಗುರುಚರಣ ಹಾಗೂ ವಸುಧಾ ಅವರೂ ಸಂಗೀತ, ನಾಟಕ ಹಾಗೂ ನೃತ್ಯ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಸದಾಶಿವರಾಯರ ಮರಿಮಕ್ಕಳಾದ ನಿವೇದಿತಾ, ಉಲುಪಿ, ಮಿಥಾ, ಪರಿಮಳಾ ಹಾಗೂ ದೀಪಾಲಿ ಕೂಡ ಕಲಾಸಕ್ತರು.

ಗರುಡರ ಕುಟುಂಬಕ್ಕೆ ಸೊಸೆಯರಾಗಿ ಬಂದ ರಜನಿ ಹಾಗೂ ಶೋಭಾ ಅವರೂ ನೃತ್ಯ, ಸಂಗೀತ ಹಾಗೂ ಅಭಿನಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಗರುಡ ಸದಾಶಿವರಾಯರ ಕುಟುಂಬದ ಕುಡಿಗಳು ಈಗ ಬೇರುಬಿಟ್ಟು ಕಲಾ ಹೆಮ್ಮರವಾಗಿಯೂ ಬೆಳೆದಿದ್ದಾರೆ. ಅಷ್ಟೇ ಅಲ್ಲ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿರುವ ಗರುಡರ ಮೊಮ್ಮಕ್ಕಳಲ್ಲಿ ಒಬ್ಬರಾದ ಅಪರ್ಣಾ ಅವರು ಅಲ್ಲಿಯೇ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. ಪ್ರಕಾಶ ಗರುಡ ಅವರು ಧಾರವಾಡದಲ್ಲಿ "ಗೊಂಬೆಮನೆ" ಎನ್ನುವ ಸಂಸ್ಥೆಯನ್ನು ಕಟ್ಟಿ ಕಲೆಯ ಇನ್ನೊಂದು ಕ್ಷೇತ್ರದಲ್ಲಿ ವಿಶಿಷ್ಟವಾದ ಸೇವೆ ಸಲ್ಲಿಸುತ್ತಿದ್ದಾರೆ.

ಹೀಗೆ ವಿವಿಧ ಕಡೆಗೆ ಬೇರು ಬಿಟ್ಟುಕೊಂಡು ಹರಡಿರುವ ಹೆಮ್ಮರದ ಒಂದು ಬೇರು ಉದ್ಯಾನನಗರಿಯಾದ ಬೆಂಗಳೂರಿನಲ್ಲಿ ವಿಕಾಸವಾಗುತ್ತಿದೆ. ಅದಕ್ಕೆ ಗರುಡ ನಾಟ್ಯ ಸಂಘ ಎನ್ನುವ ಕಲಾ ಸಂಘಟನೆಯ ಛತ್ರಛಾಯೆಯೂ ಸಿಕ್ಕಿದೆ. ಈ ಕಲಾ ಸಂಘಕ್ಕೆ ಹೊಸದೊಂದು ಆಯಾಮ ನೀಡಿದವರು ಶೋಭಾ. ಟೆಲಿವಿಷನ್ ಕ್ಷೇತ್ರದಲ್ಲಿ ನಟಿಯಾಗಿ ಜನಪ್ರಿಯತೆ ಗಳಿಸಿರುವ ಶೋಭಾ ಅವರು ತಮ್ಮ ಹವ್ಯಾಸವಾದ ನೃತ್ಯ ಕಲೆಯನ್ನು ಗರುಡ ನಾಟ್ಯ ಸಂಘದ ಮೂಲಕ ನೀರೆರೆದು ಬೆಳೆಸುತ್ತಿದ್ದಾರೆ.

ಕಳೆದ ಆರು ವರ್ಷಗಳಿಂದ ಗರುಡ ನಾಟ್ಯ ಸಂಘವು ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶದ ಅನೇಕ ನಗರಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದೆ. ನೃತ್ಯಕ್ಕೆ ಮಾತ್ರ ಸೀಮಿತವಾಗಿ ಉಳಿಯದೆ ಸಾಹಿತ್ಯ, ಛಾಯಾಚಿತ್ರಕಲೆ, ಪೇಂಟಿಂಗ್, ಸಂಗೀತ, ನಾಟಕ ಹಾಗೂ ಭಾಷಣ ಕಲೆಯ ಮೂಲಕ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂಥ ಕಾರ್ಯಕ್ರಮಗಳನ್ನು ಹಾಗೂ ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದೆ